Tuesday, June 29, 2010

ಗೃಹ ಪ್ರವೇಶ






आज नहीं तो कभी नहीं, ಗಟ್ಟಿಯಾಗಿಯೇ ನಿಶ್ಚಯಿಸಿದ್ದೆ ನನಗೆ ನಾನೆ. ಭೂತಾಯಿ ಮಡಿಲಿಗೆ ಬ೦ದು ಭರ್ಜರಿ ಕಾಲು ಶತಮಾನಗಳು ಕಳೆದು, ಅದರ ಮೇಲಿವತ್ತಿಗಿನ್ನೆರಡು ವರ್ಷಗಳೇ ಉರುಳಿದರೂ ನನ್ನ ಸೋ೦ಬೇರಿತನ ಒಂದಿಷ್ಟೂ ಕು೦ದಿಲ್ಲ, ಅದಕ್ಕೆ೦ದಿಗೂ ಚಿರಯೌವ್ವನ'! ಅದು ತನ್ನ೦ತದ್ದೇ ಸಮಾನ ಮನಸ್ಕರ ಪಟಾಲ೦ ಕಟ್ಕೊ೦ಡು (ಪಲಾಯನವಾದ, ಅಶಿಸ್ತು, ಕೆಲವೊಮ್ಮೆ ಭರ್ಜರಿ ವೈರಾಗ್ಯ…) ನನ್ನೆಲ್ಲ ಉತ್ಸಾಹಗಳನ್ನೂ ಸದ್ದಿಲ್ಲದ್ದೆ ಉಸಿರು ಕಟ್ಟಿಸಿರುತ್ತೆ. ಹಾಗಾಗಿಯೆ ಕಾಲು ಶತಮಾನಗಳೆಡೆಗೆ ಇಣುಕು ನೋಟ ಬೀರಿದಾಗ ಅದ್ಬುತವೆನಿಸುವ೦ತ ಆತ್ಮೀಯ ಸ್ನೇಹಗಳ ಸ೦ಪಾದನೆ ಬಿಟ್ಟರೆ ಉಳಿದ೦ತೆ ಇನ್ನಾವುದೇಸಾಧನೆಗಳbalance ಇಲ್ಲ ನನ್ನ ಬದುಕಿನ ಅಕೌ೦ಟಿನಲ್ಲಿ. ವಿಪರ್ಯಾಸ ಅ೦ದ್ರೆ ಮನಸ್ಸಿಗೆ ಆ ಕುರಿತು ಯಾವ ಖೇದನೂ ಇಲ್ಲ! ಆದ್ರೆ ಈ ಬಾರಿ ತು೦ಬಾ ತು೦ಬಾ ಗ೦ಭೀರವಾಗಿಯೇ ನಿರ್ಧರಿಸಿದ್ದೆ do or die ಅಂತ. ಛೇ ಬಿಡ್ತು ಅನ್ನಿ, ಹುಟ್ಟುಹಬ್ಬದ ದಿನ ಸಾಯೋ ಮಾತಾಡ್ತಿಲ್ಲ, ನನ್ನೀ ಪ್ರಯತ್ನದ ಕುರಿತಾಗಿ ಅಂದ್ಕೊಂಡಿದ್ದಷ್ಟೇ.





ಎಷ್ಟೆಲ್ಲಾ ಸಂದರ್ಭಗಳು ಉರುಳಿ ಹೋದವು.... ಎಷ್ಟೆಲ್ಲಾ ಘಟನೆಗಳು ಜರುಗಿ ಹೋದವು... ಆದ್ರೆ ನಾನೋ ಬರೀ ಮನಸ್ಸಿನೊಳಗೇ ಮಾತಿನರಮನೆ ಕಟ್ತಾ ಕೂತಿದ್ದೆ. ಈ ರೀತಿ ಮುಫ್ತಾಗಿ ಸಿಕ್ಕೋ ಸೈಟಲ್ಲಿ ಮನೆ ಕಟ್ಟೋ ಅವಕಾಶ ಇದ್ರೂ, ಮನಸ್ಯಾಕೋ ' ಧೀಂ ರಂಗಾ' ಅಂತ ತನ್ನೆಲ್ಲಾ ಕಾರ್ಯ ಚಟುವಟಿಕೆಗಳಿಂದ ವಿಮುಖವಾಗಿ ಕೂತಿತ್ತು. ಹಾಗಂತ ಒಂದೆರಡು ವರ್ಷಗಳ ಹಿಂದೆನೇ ಆರಂಭಶೂರತ್ವದೊಂದಿಗೆ ಗುದ್ದಲಿ ಪೂಜೆ ಮಾಡಿದ್ದೆ ಕೂಡ. ಆದ್ರೆ ಗಳಿಗೆ ದೋಷನೋ, ವಾಸ್ತು ದೋಷನೋ ಗೊತ್ತಿಲ್ಲ ಕೆಲಸ ಮುಂದುವರಿಯಲೇ ಇಲ್ಲ. ಮತ್ತೆ ಆ ಹುಮ್ಮಸ್ಸು ಪುಟಿದೆದ್ದು ಇಂಥಾ ಒಂದು ಕ್ಷಣ ಮೈದೇಳಲು ಬದುಕು ಸಕತ್ತಾಗೆ ಸಮಯದ ದಂಡ ತೆತ್ತ ಬೇಕಾಯ್ತು.




ಹೇಗೋ ಹಾಗೆ ಅನ್ನೋ ಉಡಾಫೆಗೋ, ಎಲ್ರೂ ಕಟ್ಟಿದಾರಲ್ಲ ನಾನು ಕಟ್ತೀನಿ ಅನ್ನೋ ಹು೦ಬತನಕ್ಕೆ ಬಿದ್ದೋ ಇಟ್ಟಿಗೆ ಜೋಡಿಸುವುದು ಮುಂಚಿನಿಂದನೂ ಬೇಕಿರಲಿಲ್ಲ ನನಗೆ. ಅರಿವಿದೆ ನ೦ಗೂ ಇಲ್ಲಿರುವ ಸವಾಲುಗಳು. ಕೆಲವರ ಕೆಸರೆರೆಚಾಟ, ಕಾಲೆಳೆಯೋ ಚಟ, ಮುಖವಾಡಗಳೊಂದಿಗಿನ ವ್ಯವಹಾರ... ಇದೆಲ್ಲದರಿಂದ ಕೆಲವೊಮ್ಮೆ ನಿಜವಾದ ಪ್ರತಿಭೆಗಳು ವಿದಾಯದ ಮಾತಾಡೋವಷ್ಟು ರೋಸಿ ಹೋಗಿದ್ದು … ಎಲ್ಲವನ್ನು ಹತ್ತಿರದಿಂದ ನೋಡಿದ್ದೀನಿ. ಹಾಗಾಗಿಯೇ ಈ ಪ್ರಾರಂಭದ ಕುರಿತಾಗಿ ನಂಗೆ ಅಂತಾ exitement ಇರ್ಲಿಲ್ಲ. ಆದ್ರೂ ಇವತ್ತಿಗೆ ಶುಭ ಮುಹೂರ್ತ ನಿಗಧಿ ಮಾಡಿದ್ದರ ಹಿಂದೆ ಎರಡು ಕಾರಣಗಳಿವೆ. ಒಂದು - 'ಬರಿಯದೆ ಉಳಿಯಲಾರೆ' ಅನ್ನೋ ತುಡಿತ ಈ ಬಾರಿ ತಳ್ಳಿಹಾಕಲಾಗದಷ್ಟು ಅಚಲವಾಗಿ ಬೇರೂರಿದ್ರಿಂದ. ಎರಡು - ಕಟ್ಟುವ ಕನಸಿದ್ರೂ, ತಕ್ಕ ಮಟ್ಟಿಗಿನ ಸಾಮರ್ಥ್ಯ ಇದ್ರೂ, procrastination ಅನ್ನೋ ಜನ್ಮಕ್ಕಂಟಿದ ಜಾಡ್ಯದಿಂದಾಗಿ ನನ್ನ ಬಗ್ಗೆ ನನಗೆ ಹೇಸಿಗೆ ಆಗಿರೋದ್ರಿಂದ. ಅದೇನೋ ಹೇಳ್ತಾರಲ್ವ?better to be late than to be never’ ಅಂತ, ಹೀಗೆ ಸುಮ್ನೆ ನೆನಪಿಸ್ಕೊಳ್ತಾ ಇರ್ಬೇಕು ಅದ್ನ ಅಗತ್ಯ ಕಂಡಾಗ್ಲೆಲ್ಲ, ಏನಂತೀರಿ?




ಬೀಡು ಬಿಡೋಕೆ ಮುಂಚೆ ಸ್ಥಳ ಪರಿಚಯ ಮಾಡಿಕೊಳ್ಳೋದು ಒಳಿತು ಅನ್ನೋ ಕಾರಣಕ್ಕೆ, ಪರ್ಯಟನೆ ಹೊರಟು ತಕ್ಕ ಮಟ್ಟಿಗೆ ತಿಳುವಳಿಕೆ ಪಡೆದೇ ಬಂದಿದೀನಿ. ನಿಜಕ್ಕೂ ವಿಶಿಷ್ಟ ಅನುಭವ! ಕೆಲವರ ಮನೆಯಂತೂ ಯಾವ ಪರಿ ಇದೆಯಂದ್ರೆ ತಕ್ಷಣ ಶರೀಫಜ್ಜ ನೆನಪಾದ್ರು, 'ಸೋರುತಿಹುದು ಮನೆಯ ಮಾಳಿಗೆ...'! ಮತ್ತೆ ಕೆಲವರದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಕೋಮಾ ಅವಸ್ಥೆ. ಆದ್ರೆ ಮತ್ತೆ ಕೆಲವರ ಮನೆಗಳಿದ್ಯಲ್ಲ... ಸ್ಪೂರ್ತಿಯ ಸೆಲೆ ಅದು. ಎಂಥವರಲ್ಲೂ ಕನಸಿನ ಬೀಜ ಬಿತ್ತುವಂತದ್ದು. ಒಟ್ನಲ್ಲಿ ಇತಿ-ಮಿತಿ, ಸ್ಥಿತಿ-ಗತಿ ಗಳೆಲ್ಲದರ ಪರಿಜ್ಞಾನದೊಂದಿಗೆ 'ಗೃಹಪ್ರವೇಶ' ಮಾಡ್ತಿದೀನಿ.ತುಂಬು ಹೃದಯದ ಸ್ವಾಗತ ನಿಮಗೆ, ನನ್ನೀ ಪುಟ್ಟ ಗೂಡಿಗೆ. ನಿತ್ಯ ದಾಸೋಹದ ಸಾಮರ್ಥ್ಯ ಇಲ್ಲವಾದ್ರು, ಅಪರೂಪದ ಭೇಟಿಯಲ್ಲಿ ನಿರಾಸೆಗೆಡೆಮಾಡದಂತೆ ಕಾಳಜಿ ವಹಿಸ್ತೀನಿ. ತುಂಬಾ ಭರ್ಜರಿ ಆತಿಥ್ಯದ ಅವಕಾಶಗಳಿಲ್ಲದಿದ್ರೂ (ಯಾವುದೇ ವಿಚಾರದಲ್ಲಾಗ್ಲಿ specialisation ಅಂತೇನು ಇಲ್ಲ ನಂಗೆ) ಆತ್ಮೀಯ ವಾತಾವರಣ ಸೃಷ್ಟಿಸಲು ಪ್ರಾಮಾಣಿಕ ಪ್ರಯತ್ನ ಪಡ್ತೀನಿ. ಬರುವ ಶ್ರಮ ತಗೊಳ್ತಿರಲ್ವಾ? ಸಾಹಿತ್ಯದ ಯಾವುದೇ ಪ್ರಕಾರನ ಓದಲು ಕೈಗೆತ್ತಿಕೊಂಡಾಗ ನನ್ನಲ್ಲಿರುವುದು ಮೂರು ಬಗೆಯ ನಿರೀಕ್ಷೆಗಳು. ಒಂದೋ ಮಾಹಿತಿ ಅಥವಾ ಮನೋರಂಜನೆ ಇಲ್ಲವೇ ಮಂಥನ. ಹಾಗಾಗಿ ಅದೇ ಜವಾಬ್ದಾರಿಯೊಂದಿಗೆ ನಾನಿಲ್ಲಿ ಮುನ್ನಡೆಯಲು ಬದ್ಧಳಾಗಿದ್ದೀನಿ. ಮನಸ್ಸಿಗನ್ಸಿದ್ನೆಲ್ಲ ಅಕ್ಷರಕ್ಕಿಳಿಸುವ ಸಾಮರ್ಥ್ಯ ಆಗ್ಲಿ, ಮುಕ್ತವಾಗಿ ಪ್ರಕಟಿಸೋ ದಾರ್ಡ್ಯ ಆಗ್ಲಿ ನನಗಿಲ್ಲ. ಹಾಗಾಗಿ ನನ್ನೆಲ್ಲ ಬರವಣಿಗೆಗೂ ಇದು ವೇದಿಕೆ ಆಗದೆ ಇರಬಹುದು.ಆದರೂ ತುಂಬಾ ಪ್ರೀತಿಯಿಂದ, ಆಸ್ಥೆಯಿಂದ ಮುನ್ನಡಿತಿದ್ದೀನಿ ಜೋತೆಗಿರ್ತೀರ ತಾನೇ?




ಗೊತ್ತಿದೆಯಲ್ವಾ ನಿಮಗೂ? ಯಾರದೇ ಮನೆಗೆ ಹೋಗುವಾಗಲು ಖಾಲಿ ಕೈಲಿ ಹೋಗಬಾರ್ದು ಅಂತಾರೆ. ಆದ್ರೆ ನನ್ನ ಮನೆಯಲ್ಲದು ಸ್ವಲ್ಪ ಉಲ್ಟಾ, ಇಲ್ಲಿಗೆ ಬಂದವರ್ಯಾರು ಬರಿಗೈಲಿ ಹಿಂದಿರುಗಬಾರ್ದು ಅಷ್ಟೇ. ನೆನಪಿರಲಿ 'ಅನಿಸಿಕೆಗಳೇ ಉಡುಗೊರೆ'. ನನ್ನಲ್ಲಿನ ತಿದ್ದಿಕೊಳ್ಳಬೇಕಾದ ಅಂಶಗಳನ್ನ ಬೊಟ್ಟು ಮಾಡಿ ತೋರಿಸೋ ಹೊಣೆಗಾರಿಕೆ ನಿಮ್ಮದು. ಎಂಥಾ ಕಟು ವಿಮರ್ಶೆಗೂ ನನ್ನದು ಮುಕ್ತ ಮನಸ್ಸಿನ ಸ್ವಾಗತ. ಆದ್ರೆ ಬರಿದೆ ಕುಟುಕುಗಳಿಗೆ... मारो गोली !




ಕಡೆಯದಾಗಿ. 'ಗುಬ್ಬಿ' ನನ್ನ ಪಾಲಿನ ನಿರಂತರ ಆಕರ್ಷಣೆ. ಅದಕ್ಕೆ ಅದರದ್ದೇ ಆದ ಹೆಚ್ಚುಗಾರಿಕೆಗಳೇನಿಲ್ಲದಿದ್ರೂ ಅದರ ಸರಳ, ಸಹಜ ಹಾಗು ಮುಗ್ಧ ನಡವಳಿಕೆ ಇಂದಾಗಿ ಮನಸ್ಸಿಗೆ ಆಪ್ತ ಅನ್ನಿಸುತ್ತೆ. ಆ ಪುಟ್ಟ ಜೀವ ನನ್ನ ಪಾಲಿನ ಸ್ಫೂರ್ತಿ. ಹಾಗಾಗಿ ನನ್ನೀ ಗೂಡಿಗೆ 'ಗುಬ್ಬಿಮನೆ' ಅನ್ನೋ ಹೆಸರಿಟ್ಟು ನಿಮ್ಮ ಮುಂದೆ ಪ್ರಸ್ತುತ ಪಡಿಸ್ತಿದ್ದೀನಿ. ಹಾರೈಕೆಗಳಿರ್ಲಿ ನಿಮ್ಮದು.




ಮತ್ತೆ ಸಿಕ್ಕೋಣ.
ತುಂಬು ವಿಶ್ವಾಸದೊಂದಿಗೆ
ರಜನಿ.